ಮೈಯ ಚರ್ಮ ಕಪ್ಪಾದ ಮಾತ್ರಕ್ಕೆ ಮನುಷ್ಯರನ್ನು ಕೀಳಾಗಿ ಕಾಣುವ, ಅವರನ್ನು ಗುಲಾಮರನ್ನಾಗಿ ಪ್ರಾಣಿಗಳಂತೆ ಪೇಟೆಗಳಲ್ಲಿ ಮಾರಾಟ ಮಾಡಲ್ಪಡುವ, ಒಡೆಯನಿಚ್ಛೆಗೆ ವಿರುದ್ಧವಾಗಿ ಏನನ್ನೂ ಆಲೋಚಿಸಲಿಕ್ಕೂ ಸ್ವಾತಂತ್ರ್ಯವಿಲ್ಲದ, ಅವನ ಬೈಗುಳ ಹೊಡೆತಗಳಿಗೆ ಬಲಿಯಾದರೂ ಆತನಿಗಾಗಿ ಮಾತ್ರ ಜೀವ ಸವೆಸುವ, ಅದರ ವಿರುದ್ಧ ಉಸಿರೆತ್ತಲೂ ಸಾಧ್ಯವಿಲ್ಲದಂತಹ ಒಂದು ಸಮಾಜದಲ್ಲಿ ಹುಟ್ಟಿನಿಂದಲೇ ಗುಲಾಮರಾಗಿ ಬೆಳೆದ ಬದುಕು ಇಥಿಯೋಪಿಯಾದ ಆ ಕರಿಯ ಗುಲಾಮ ಬಿಲಾಲ್(ರ)ರದ್ದಾಗಿತ್ತು. ಆದರೆ ಪ್ರವಾದಿ ಮುಹಮ್ಮದ್(ಸ) ಅವರು ಸತ್ಯ ಸಂದೇಶವನ್ನು ಮಕ್ಕಾದಲ್ಲಿ ಸಾರತೊಡಗಿದ ಆರಂಭದಲ್ಲೇ ಆ ಕರೆಗೆ ಓಗೊಟ್ಟು, ಮಾನವ ಪ್ರಭುತ್ವವನ್ನು ಧಿಕ್ಕರಿಸಿ ಸರ್ವಲೋಕಗಳ ಪ್ರಭುವಾದ ಅಲ್ಲಾಹನಿಗೆ ತನ್ನ ಬದುಕನ್ನು ಅರ್ಪಿಸಿದಾಗಿನಿಂದ ಅವರು ಸ್ವಾತಂತ್ರ್ಯದ ಸವಿಯನ್ನು ಅನುಭವಿಸತೊಡಗಿದರು.
ಇಸ್ಲಾಮ್ ದೀನ-ದಲಿತರ, ಅಸಹಾಯಕರ, ಶೋಷಿತರ, ಅಸ್ಪೃಶತೆ ಮತ್ತು ಅಸಮಾನತೆಯಿಂದಾಗಿ ತುಳಿತಕ್ಕೊಳಗಾದವರ ವಿಮೋಚನಾ ಆಂದೋಲನವೆಂಬುದನ್ನು ಕಾರ್ಯತಃ ಸಾಧಿಸಿ ತೋರಿಸಿರುವುದಕ್ಕೆ ಬಿಲಾಲ್ರು(ರ) ಜ್ವಲಂತ ಸಾಕ್ಷಿಯಾಗಿದ್ದಾರೆ. ಬಿಲಾಲ್(ರ) ಕೇವಲ ಓರ್ವ ವ್ಯಕ್ತಿಯಲ್ಲ. ಲೋಕಾಂತ್ಯದವರೆಗೂ ಮರ್ದಿತರ, ಶೋಷಿತರ, ದೀನ-ದಲಿತರ ಸ್ವಾತಂತ್ರ್ಯದ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಅಸ್ಪೃಶತೆ, ಅಸಮಾನತೆ ಮತ್ತು ಉಚ್ಚ-ನೀಚತೆಯ ಪಾತಾಳದಿಂದ ಮಾನವತೆಯ ಅತ್ಯುನ್ನತ ಶಿಖರಕ್ಕೇರಿದ ಮಹಾ ಸೌಭಾಗ್ಯವಂತ, ಸತ್ಯಮಾರ್ಗದಲ್ಲಿ ಅವರು ತೀವ್ರ ಅಗ್ನಿ ಪರೀಕ್ಷೆಗಳನ್ನು ಎದುರಿಸಿದರು. ಹಿಂಸೆ-ದೌರ್ಜನ್ಯಗಳಿಂದ ಶರೀರವು ಜರ್ಝರಿತವಾಗಿದ್ದರೂ ಅವರ ಮನಸ್ಸು ಪರಲೋಕದ ಶಾಶ್ವತ ಸುಖ ಸೌಭಾಗ್ಯಗಳನ್ನು ನೆನೆದು ಹಗುರವಾಗುತ್ತಿತ್ತು.
ಕೇರಳದ ಸುಪ್ರಸಿದ್ಧ ವಾಗ್ಮಿ, ಗ್ರಂಥಕರ್ತ ಹಾಗೂ ಸಾಹಿತಿ ಶೈಖ್ ಮುಹಮ್ಮದ್ ಕಾರಕುನ್ನು ಅವರು ಬಿಲಾಲ್ರ(ರ) ಉಜ್ವಲ ಬದುಕಿನ ಕುರಿತು ಸಂಕ್ಷಿಪ್ತವಾಗಿ ಈ ಕೃತಿಯಲ್ಲಿ ಬೆಳಕು ಚೆಲ್ಲಿದ್ದಾರೆ.
Ratings & Reviews
Login account to write review
Login0.00
Average Rating- (0.00)
